Adi Parva: Chapter 136

ಆದಿ ಪರ್ವ: ಜತುಗೃಹ ಪರ್ವ

೧೩೬

ಅರಗಿನ ಮನೆಯಲ್ಲಿ ಪುರೋಚನ ಮತ್ತು ರಾತ್ರಿ ಭೋಜನಕ್ಕಾಗಿ ತನ್ನ ಐವರು ಮಕ್ಕಳೊಂದಿಗೆ ಬಂದಿದ್ದ ನಿಷಾದಿಯು ಮಲಗಿರುವಾಗ ಭೀಮನು ಬೆಂಕಿ ಹಚ್ಚಿಸಿದುದು (೧-೯). ಪಾಂಡವರು ಸುಟ್ಟುಹೋದರೆಂದು ಪುರಜನರ ಹಾಹಾಕಾರ (೧೦-೧೪). ಸುರಂಗದಿಂದ ತಪ್ಪಿಸಿಕೊಂಡು ಭೀಮನ ಸಹಾಯದಿಂದ ಪಾಂಡವರು ಕುಂತಿಯೊಂದಿಗೆ ಪಲಾಯನಗೈದುದು (೧೫-೧೯).

01136001 ವೈಶಂಪಾಯನ ಉವಾಚ|

01136001a ತಾಂಸ್ತು ದೃಷ್ಟ್ವಾ ಸುಮನಸಃ ಪರಿಸಂವತ್ಸರೋಷಿತಾನ್|

01136001c ವಿಶ್ವಸ್ತಾನಿವ ಸಂಲಕ್ಷ್ಯ ಹರ್ಷಂ ಚಕ್ರೇ ಪುರೋಚನಃ||

01136002a ಪುರೋಚನೇ ತಥಾ ಹೃಷ್ಟೇ ಕೌಂತೇಯೋಽಥ ಯುಧಿಷ್ಠಿರಃ|

01136002c ಭೀಮಸೇನಾರ್ಜುನೌ ಚೈವ ಯಮೌ ಚೋವಾಚ ಧರ್ಮವಿತ್||

ವೈಶಂಪಾಯನನು ಹೇಳಿದನು: “ಅವರು ಸಂತೋಷದಿಂದ ಏನೂ ಸಂಶಯವಿಲ್ಲದವರ ಹಾಗೆ ಒಂದು ವರ್ಷ ಸಂಪೂರ್ಣವಾಗಿ ಕಳೆದುದನ್ನು ನೋಡಿದ ಪುರೋಚನನು ಹರ್ಷಿತನಾದನು. ಹಾಗೆ ಪುರೋಚನನು ಸಂತೋಷದಿಂದಿರಲು ಕೌಂತೇಯ ಧರ್ಮವಿದ ಯುಧಿಷ್ಠಿರನು ಭೀಮಸೇನ, ಅರ್ಜುನ ಮತ್ತು ಯಮಳರಿಗೆ ಹೇಳಿದನು:

01136003a ಅಸ್ಮಾನಯಂ ಸುವಿಶ್ವಸ್ತಾನ್ವೇತ್ತಿ ಪಾಪಃ ಪುರೋಚನಃ|

01136003c ವಂಚಿತೋಽಯಂ ನೃಶಂಸಾತ್ಮಾ ಕಾಲಂ ಮನ್ಯೇ ಪಲಾಯನೇ||

“ಪಾಪಿ ಪುರೋಚನನು ನಮಗೇನೂ ಸಂಶಯವಿಲ್ಲವೆಂದು ನಂಬಿದ್ದಾನೆ. ಆ ನೃಶಂಸಾತ್ಮನನ್ನು ಮೋಸಗೊಳಿಸಿ ಪಲಾಯನಮಾಡುವ ಕಾಲವು ಪ್ರಾಪ್ತವಾಗಿದೆ ಎಂದು ನನ್ನ ಅಭಿಪ್ರಾಯ.

01136004a ಆಯುಧಾಗಾರಮಾದೀಪ್ಯ ದಗ್ಧ್ವಾ ಚೈವ ಪುರೋಚನಂ|

01136004c ಷಟ್ಪ್ರಾಣಿನೋ ನಿಧಾಯೇಹ ದ್ರವಾಮೋಽನಭಿಲಕ್ಷಿತಾಃ||

ಆಯುಧಾಗರಕ್ಕೆ ಬೆಂಕಿಯನ್ನಿಟ್ಟು ಪುರೋಚನನನ್ನೂ ಸುಟ್ಟು ಬಿಡೋಣ. ಆರು ಜನರನ್ನು ಇಲ್ಲಿ ಇರಿಸಿ, ನಾವು ಯಾರಿಗೂ ಕಾಣಿಸದ ಹಾಗೆ ತಪ್ಪಿಸಿಕೊಳ್ಳೋಣ.”

01136005a ಅಥ ದಾನಾಪದೇಶೇನ ಕುಂತೀ ಬ್ರಾಹ್ಮಣಭೋಜನಂ|

01136005c ಚಕ್ರೇ ನಿಶಿ ಮಹದ್ರಾಜನ್ನಾಜಗ್ಮುಸ್ತತ್ರ ಯೋಷಿತಃ||

ರಾಜನ್! ಆಗ ದಾನದ ನೆಪದಿಂದ ಕುಂತಿಯು ಒಂದು ರಾತ್ರಿ ಬ್ರಾಹ್ಮಣರಿಗೆ ಮಹಾ ಭೋಜನವನ್ನು ನಿಯೋಜಿಸಿದಳು.

01136006a ತಾ ವಿಹೃತ್ಯ ಯಥಾಕಾಮಂ ಭುಕ್ತ್ವಾ ಪೀತ್ವಾ ಚ ಭಾರತ|

01136006c ಜಗ್ಮುರ್ನಿಶಿ ಗೃಹಾನೇವ ಸಮನುಜ್ಞಾಪ್ಯ ಮಾಧವೀಂ||

ಭಾರತ! ಬಂದಿದ್ದ ಸ್ತ್ರೀಯರು ಯಥೇಚ್ಛವಾಗಿ ತಿಂದು ಕುಡಿದು ವಿಹರಿಸಿದರು. ನಂತರ ಮಾಧವಿಯ ಅನುಜ್ಞೆಯನ್ನು ಪಡೆದು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

01136007a ನಿಷಾದೀ ಪಂಚಪುತ್ರಾ ತು ತಸ್ಮಿನ್ಭೋಜ್ಯೇ ಯದೃಚ್ಛಯಾ|

01136007c ಅನ್ನಾರ್ಥಿನೀ ಸಮಭ್ಯಾಗಾತ್ಸಪುತ್ರಾ ಕಾಲಚೋದಿತಾ||

ಅನ್ನವನ್ನು ಬೇಡಿಕೊಂಡು ಕಾಲಚೋದಿತ ನಿಷಾದಿಯೋರ್ವಳು ತನ್ನ ಐವರು ಪುತ್ರರೊಂದಿಗೆ ಆ ಭೋಜನಕ್ಕೆ ಬಂದಿದ್ದಳು.

01136008a ಸಾ ಪೀತ್ವಾ ಮದಿರಾಂ ಮತ್ತಾ ಸಪುತ್ರಾ ಮದವಿಹ್ವಲಾ|

01136008c ಸಹ ಸರ್ವೈಃ ಸುತೈ ರಾಜಂಸ್ತಸ್ಮಿನ್ನೇವ ನಿವೇಶನೇ|

01136008e ಸುಷ್ವಾಪ ವಿಗತಜ್ಞಾನಾ ಮೃತಕಲ್ಪಾ ನರಾಧಿಪ||

ಅವಳು ಮತ್ತು ಅವಳ ಪುತ್ರರು ಮದಿರವನ್ನು ಕುಡಿದು ಅಮಲಿನಿಂದ ಮದವಿಹ್ವಲರಾದರು. ರಾಜನ್! ಅವರೆಲ್ಲರೂ ಮಕ್ಕಳೂ ಕೂಡಿ ಅಲ್ಲಿಯೇ ಉಳಿದರು. ನರಾಧಿಪ! ಅವರು ಸತ್ತವರಂತೆ ಹೊರಗಿನ ಜ್ಞಾನವೇ ಇಲ್ಲದೇ ಮಲಗಿದ್ದರು.

01136009a ಅಥ ಪ್ರವಾತೇ ತುಮುಲೇ ನಿಶಿ ಸುಪ್ತೇ ಜನೇ ವಿಭೋ|

01136009c ತದುಪಾದೀಪಯದ್ಭೀಮಃ ಶೇತೇ ಯತ್ರ ಪುರೋಚನಃ||

ವಿಭೋ! ಆಗ ಭಿರುಗಾಳಿ ಬೀಸುತ್ತಿರಲು ಜನರೆಲ್ಲ ರಾತ್ರಿ ಮಲಗಿರಲು ಭೀಮನು ಪುರೋಚನನು ಮಲಗಿದ್ದಲ್ಲಿ ಬೆಂಕಿಯನ್ನಿಟ್ಟನು.

01136010a ತತಃ ಪ್ರತಾಪಃ ಸುಮಹಾಂ ಶಬ್ಧಶ್ಚೈವ ವಿಭಾವಸೋಃ|

01136010c ಪ್ರಾದುರಾಸೀತ್ತದಾ ತೇನ ಬುಬುಧೇ ಸ ಜನವ್ರಜಃ||

ಆಗ ಜೋರಾಗಿ ಉರಿಯುತ್ತಿರುವ ಬೆಂಕಿಯ ಶಬ್ಧದಿಂದ ಜನರೆಲ್ಲರಿಗೂ ಎಚ್ಚರವಾಯಿತು.

01136011 ಪೌರಾ ಊಚುಃ|

01136011a ದುರ್ಯೋಧನಪ್ರಯುಕ್ತೇನ ಪಾಪೇನಾಕೃತಬುದ್ಧಿನಾ|

01136011c ಗೃಹಮಾತ್ಮವಿನಾಶಾಯ ಕಾರಿತಂ ದಾಹಿತಂ ಚ ಯತ್||

ಪೌರರು ಹೇಳಿದರು: “ದುರ್ಯೋಧನನ ಆಜ್ಞೆಯಂತೆ ಆ ಪಾಪಿ ಅಕೃತಬುದ್ಧಿಯು ಈ ಮನೆಯನ್ನು ಕಟ್ಟಿ ತಾನೇ ಅದರಲ್ಲಿ ಸುಟ್ಟುಹೋದ.

01136012a ಅಹೋ ಧಿಗ್ಧೃತರಾಷ್ಟ್ರಸ್ಯ ಬುದ್ಧಿರ್ನಾತಿಸಮಂಜಸೀ|

01136012c ಯಃ ಶುಚೀನ್ಪಾಂಡವಾನ್ಬಾಲಾನ್ದಾಹಯಾಮಾಸ ಮಂತ್ರಿಣಾ||

ಮಂತ್ರಿಗಳ ಮೂಲಕ ಬಾಲಕ ಶುದ್ಧ ಪಾಂಡವರನ್ನು ಸುಟ್ಟುಹಾಕಿದ ಧೃತರಾಷ್ಟ್ರನ ಕೆಟ್ಟ ಬುದ್ಧಿಗೆ ಧಿಕ್ಕಾರ!

01136013a ದಿಷ್ಟ್ಯಾ ತ್ವಿದಾನೀಂ ಪಾಪಾತ್ಮಾ ದಗ್ಧೋಽಯಮತಿದುರ್ಮತಿಃ|

01136013c ಅನಾಗಸಃ ಸುವಿಶ್ವಸ್ತಾನ್ಯೋ ದದಾಹ ನರೋತ್ತಮಾನ್||

ವಿಶ್ವಾಸದಿಂದಿದ್ದ ಆ ಮುಗ್ಧ ನರೋತ್ತಮರನ್ನು ಸುಡುವುದರೊಂದಿಗೆ ಆ ಅತಿದುರ್ಮತಿ ಪಾಪಾತ್ಮನೂ ಸುಟ್ಟು ಹೋಗಿದ್ದುದು ಒಳ್ಳೆಯದೇ ಆಯಿತು.””

01136014 ವೈಶಂಪಾಯನ ಉವಾಚ|

01136014a ಏವಂ ತೇ ವಿಲಪಂತಿ ಸ್ಮ ವಾರಣಾವತಕಾ ಜನಾಃ|

01136014c ಪರಿವಾರ್ಯ ಗೃಹಂ ತಚ್ಚ ತಸ್ಥೂ ರಾತ್ರೌ ಸಮಂತತಃ||

ವೈಶಂಪಾಯನನು ಹೇಳಿದನು: “ಆ ರಾತ್ರಿ ಮನೆಯನ್ನು ಸುತ್ತುವರೆದಿದ್ದ ವಾರಣಾವತದ ಜನರು ಈ ರೀತಿ ವಿಲಪಿಸಿದರು.

01136015a ಪಾಂಡವಾಶ್ಚಾಪಿ ತೇ ರಾಜನ್ಮಾತ್ರಾ ಸಹ ಸುದುಃಖಿತಾಃ|

01136015c ಬಿಲೇನ ತೇನ ನಿರ್ಗತ್ಯ ಜಗ್ಮುರ್ಗೂಢಮಲಕ್ಷಿತಾಃ||

ರಾಜನ್! ದುಃಖಿತ ಪಾಂಡವರು ತಮ್ಮ ತಾಯಿಯೊಂದಿಗೆ ಬಿಲದ ಮೂಲಕ ಹೊರಟು ಗುಟ್ಟಾಗಿ ಯಾರಿಗೂ ಕಾಣದಹಾಗೆ ಹೋದರು.

1136016a ತೇನ ನಿದ್ರೋಪರೋಧೇನ ಸಾಧ್ವಸೇನ ಚ ಪಾಂಡವಾಃ|

01136016c ನ ಶೇಕುಃ ಸಹಸಾ ಗಂತುಂ ಸಹ ಮಾತ್ರಾ ಪರಂತಪಾಃ||

ಆದರೆ ನಿದ್ದೆಯು ಕಡಿಮೆಯಾಗಿದ್ದುದರಿಂದ ಮತ್ತು ಭಯದಿಂದ ತಾಯಿಯೊಂದಿಗಿದ್ದ ಪರಂತಪ ಪಾಂಡವರಿಗೆ ಬೇಗ ಬೇಗ ಹೋಗಲು ಸಾಧ್ಯವಾಗಲಿಲ್ಲ.

01136017a ಭೀಮಸೇನಸ್ತು ರಾಜೇಂದ್ರ ಭೀಮವೇಗಪರಾಕ್ರಮಃ|

01136017c ಜಗಾಮ ಭ್ರಾತೄನಾದಾಯ ಸರ್ವಾನ್ಮಾತರಮೇವ ಚ||

ರಾಜೇಂದ್ರ! ಆಗ ಭೀಮವೇಗಪರಾಕ್ರಮಿ ಭೀಮಸೇನನು ತಾಯಿಯನ್ನೂ ಮತ್ತು ಭ್ರಾತೃಗಳೆಲ್ಲರನ್ನೂ ಎತ್ತಿಕೊಂಡು ನಡೆಯತೊಡಗಿದನು.

01136018a ಸ್ಕಂಧಮಾರೋಪ್ಯ ಜನನೀಂ ಯಮಾವಂಕೇನ ವೀರ್ಯವಾನ್|

01136018c ಪಾರ್ಥೌ ಗೃಹೀತ್ವಾ ಪಾಣಿಭ್ಯಾಂ ಭ್ರಾತರೌ ಸುಮಹಾಬಲೌ||

ಆ ವೀರನು ತಾಯಿಯನ್ನು ಭುಜದಮೇಲೇರಿಸಿಕೊಂಡನು, ಯಮಳರನ್ನು ಸೊಂಟದ ಮೇಲಿರಿಸಿಕೊಂಡನು, ಮತ್ತು ಮಹಾಬಲಶಾಲಿ ಪಾರ್ಥರೀರ್ವರನ್ನೂ ಕೈಗಳಲ್ಲಿ ಎತ್ತಿ ಹಿಡಿದನು.

01136019a ತರಸಾ ಪಾದಪಾನ್ಭಂಜನ್ಮಹೀಂ ಪದ್ಭ್ಯಾಂ ವಿದಾರಯನ್|

01136019c ಸ ಜಗಾಮಾಶು ತೇಜಸ್ವೀ ವಾತರಂಹಾ ವೃಕೋದರಃ||

ತನ್ನ ವೇಗದಿಂದ ಮರಗಳನ್ನು ಬೀಳಿಸಿದನು ಮತ್ತು ತನ್ನ ಹೆಜ್ಜೆಗಳಿಂದ ನೆಲವನ್ನು ತುಳಿದು ತತ್ತರಿಸಿದನು. ಈ ರೀತಿ ತೇಜಸ್ವಿ ವೃಕೋದರನು ಭಿರುಗಾಳಿಯಂತೆ ಮುನ್ನುಗ್ಗಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಜತುಗೃಹದಾಹೇ ಷಟ್‌ತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಜತುಗೃಹದಾಹ ಎನ್ನುವ ನೂರಾಮೂವತ್ತಾರನೆಯ ಅಧ್ಯಾಯವು.

Related image

Comments are closed.