Adi Parva: Chapter 180

ಆದಿ ಪರ್ವ: ಸ್ವಯಂವರ ಪರ್ವ

೧೮೦

ದ್ರೌಪದಿಯನ್ನು ಬ್ರಾಹ್ಮಣನಿಗೆ ಕೊಡುವುದನ್ನು ನೆರೆದ ಕ್ಷತ್ರಿಯರು ಪ್ರತಿಭಟಿಸುವುದು (೧-೧೩). ಭೀಮಾರ್ಜುನರು ದ್ರುಪದನನ್ನು ಆಕ್ರಮಣ ಮಾಡಲು ಮುನ್ನುಗ್ಗುತ್ತಿರುವ ರಾಜರನ್ನು ಎದುರಿಸಿ ತಡೆದುದು (೧೪-೧೬). ಕೃಷ್ಣನು ಪಾಂಡವರನ್ನು ಗುರುತಿಸಿ, ಪುನಃ ಬಲರಾಮನಿಗೆ ಹೇಳುವುದು (೧೭-೨೨).

01180001 ವೈಶಂಪಾಯನ ಉವಾಚ|

01180001a ತಸ್ಮೈ ದಿತ್ಸತಿ ಕನ್ಯಾಂ ತು ಬ್ರಾಹ್ಮಣಾಯ ಮಹಾತ್ಮನೇ|

01180001c ಕೋಪ ಆಸೀನ್ಮಹೀಪಾನಾಮಾಲೋಕ್ಯಾನ್ಯೋನ್ಯಮಂತಿಕಾತ್||

ವೈಶಂಪಾಯನನು ಹೇಳಿದನು: “ರಾಜನು ಕನ್ಯೆಯನ್ನು ಆ ಮಹಾತ್ಮ ಬ್ರಾಹ್ಮಣನಿಗೆ ಕೊಡಬೇಕೆಂದಿರುವಾಗ, ನೆರೆದಿದ್ದ ಮಹೀಪತಿಗಳೆಲ್ಲಾ ಕೋಪಗೊಂಡು ಪರಸ್ಪರರನ್ನು ನೋಡತೊಡಗಿದರು.

01180002a ಅಸ್ಮಾನಯಮತಿಕ್ರಮ್ಯ ತೃಣೀಕೃತ್ಯ ಚ ಸಂಗತಾನ್|

01180002c ದಾತುಮಿಚ್ಛತಿ ವಿಪ್ರಾಯ ದ್ರೌಪದೀಂ ಯೋಷಿತಾಂ ವರಾಂ||

“ಇಲ್ಲಿ ನೆರೆದಿರುವ ನಮ್ಮೆಲ್ಲರನ್ನೂ ತೃಣೀಕರಿಸಿ ಅತಿಕ್ರಮಿಸಿ, ಸ್ತ್ರೀಯರಲ್ಲೇ ಶ್ರೇಷ್ಠ ದ್ರೌಪದಿಯನ್ನು ಒಬ್ಬ ಬ್ರಾಹ್ಮಣನಿಗೆ ಕೊಡಲು ತೊಡಗಿದ್ದಾನೆ.

01180003a ನಿಹನ್ಮೈನಂ ದುರಾತ್ಮಾನಂ ಯೋಽಯಮಸ್ಮಾನ್ನ ಮನ್ಯತೇ|

01180003c ನ ಹ್ಯರ್ಹತ್ಯೇಷ ಸತ್ಕಾರಂ ನಾಪಿ ವೃದ್ಧಕ್ರಮಂ ಗುಣೈಃ||

ನಮಗೆ ಅಗೌರವವನ್ನು ತೋರಿಸುವ ಈ ದುರಾತ್ಮನನ್ನು ಕೊಲ್ಲೋಣ. ವೃದ್ಧರಿಗೆ ಅಥವಾ ಗುಣವಂತರಿಗೆ ತಗಲುವ ಸತ್ಕಾರಕ್ಕೆ ಇವನು ಅರ್ಹನಲ್ಲ.

01180004a ಹನ್ಮೈನಂ ಸಹ ಪುತ್ರೇಣ ದುರಾಚಾರಂ ನೃಪದ್ವಿಷಂ|

01180004c ಅಯಂ ಹಿ ಸರ್ವಾನಾಹೂಯ ಸತ್ಕೃತ್ಯ ಚ ನರಾಧಿಪಾನ್|

01180004e ಗುಣವದ್ಭೋಜಯಿತ್ವಾ ಚ ತತಃ ಪಶ್ಚಾದ್ವಿನಿಂದತಿ||

ಈ ನೃಪದ್ವೇಷಿ, ದುರಾಚಾರಿಯನ್ನು ಪುತ್ರರ ಸಮೇತ ಕೊಲ್ಲೋಣ. ಮೊದಲು ಎಲ್ಲ ನರಾಧಿಪರನ್ನೂ ಅಹ್ವಾನಿಸಿ, ಸತ್ಕರಿಸಿ, ಸರಿಯಾಗಿ ಭೋಜನಗಳನ್ನೆಲ್ಲ ಇತ್ತು ನಂತರ ಅವರನ್ನೇ ನಿಂದನೆಮಾಡುತ್ತಿದ್ದಾನೆ.

01180005a ಅಸ್ಮಿನ್ರಾಜಸಮಾವಾಯೇ ದೇವಾನಾಮಿವ ಸಂನಯೇ|

01180005c ಕಿಮಯಂ ಸದೃಶಂ ಕಂ ಚಿನ್ನೃಪತಿಂ ನೈವ ದೃಷ್ಟವಾನ್||

ದೇವಗಣಕ್ಕೆ ಸಮಾನ ಈ ರಾಜಸಮಾವೇಷದಲ್ಲಿ, ತನಗೆ ಸರಿಸಾಟಿಯಾದ ಯಾರೊಬ್ಬ ನೃಪನೂ ಕಾಣದೇ ಇರಲು ಹೇಗೆ ಸಾದ್ಯ?

01180006a ನ ಚ ವಿಪ್ರೇಷ್ವಧೀಕಾರೋ ವಿದ್ಯತೇ ವರಣಂ ಪ್ರತಿ|

01180006c ಸ್ವಯಂವರಃ ಕ್ಷತ್ರಿಯಾಣಾಮಿತೀಯಂ ಪ್ರಥಿತಾ ಶ್ರುತಿಃ||

ಬ್ರಾಹ್ಮಣರಿಗೆ ಸ್ವಯಂವರದಲ್ಲಿ ಭಾಗವಹಿಸುವ ಅಧಿಕಾರವಿಲ್ಲ. ಶ್ರುತಿಗಳಪ್ರಕಾರ ಸ್ವಯಂವರವು ಕ್ಷತ್ರಿಯರಿಗೆ ಮಾತ್ರ.

01180007a ಅಥ ವಾ ಯದಿ ಕನ್ಯೇಯಂ ನೇಹ ಕಂ ಚಿದ್ಬುಭೂಷತಿ|

01180007c ಅಗ್ನಾವೇನಾಂ ಪರಿಕ್ಷಿಪ್ಯ ಯಾಮ ರಾಷ್ಟ್ರಾಣಿ ಪಾರ್ಥಿವಾಃ||

ಅಥವಾ ಒಂದುವೇಳೆ ಈ ಕನ್ಯೆಗೆ ನಮ್ಮಲ್ಲಿ ಯಾರೂ ಬೇಡವಂತಿದ್ದರೆ, ಇವಳನ್ನು ಅಗ್ನಿಯಲ್ಲಿ ಹಾಕಿ ನಾವೆಲ್ಲರೂ ನಮ್ಮ ನಮ್ಮ ರಾಷ್ಟ್ರಗಳಿಗೆ ಮರಳೋಣ.

01180008a ಬ್ರಾಹ್ಮಣೋ ಯದಿ ವಾ ಬಾಲ್ಯಾಲ್ಲೋಭಾದ್ವಾ ಕೃತವಾನಿದಂ|

01180008c ವಿಪ್ರಿಯಂ ಪಾರ್ಥಿವೇಂದ್ರಾಣಾಂ ನೈಷ ವಧ್ಯಃ ಕಥಂ ಚನ||

ತಿಳುವಳಿಕೆ ಇಲ್ಲದೆಯೊ ಅಥವಾ ಲೋಭದಿಂದಲೋ ಪಾರ್ಥಿವೇಂದ್ರರೆಲ್ಲರಿಗೂ ಅಪ್ರಿಯವಾದದ್ದನ್ನು ಮಾಡಿದ್ದರೂ ಈ ಬ್ರಾಹ್ಮಣನನ್ನು ಕೊಲ್ಲುವುದಾದರೂ ಹೇಗೆ?

01180009a ಬ್ರಾಹ್ಮಣಾರ್ಥಂ ಹಿ ನೋ ರಾಜ್ಯಂ ಜೀವಿತಂ ಚ ವಸೂನಿ ಚ|

01180009c ಪುತ್ರಪೌತ್ರಂ ಚ ಯಚ್ಚಾನ್ಯದಸ್ಮಾಕಂ ವಿದ್ಯತೇ ಧನಂ||

ನಮ್ಮ ರಾಜ್ಯ, ಜೀವನ, ಸಂಪತ್ತು, ಪುತ್ರರು, ಪೌತ್ರರು, ಮತ್ತು ಸಮ್ಮಲ್ಲಿರುವ ಸರ್ವಸ್ವ ಧನವೂ ಬ್ರಾಹ್ಮಣಾರ್ಥವೇ ಅಲ್ಲವೆ?

01180010a ಅವಮಾನಭಯಾದೇತತ್ಸ್ವಧರ್ಮಸ್ಯ ಚ ರಕ್ಷಣಾತ್|

01180010c ಸ್ವಯಂವರಾಣಾಂ ಚಾನ್ಯೇಷಾಂ ಮಾ ಭೂದೇವಂವಿಧಾ ಗತಿಃ||

ಆದರೂ ನಮ್ಮ ಧರ್ಮವನ್ನು ಅಪಮಾನದಿಂದ ರಕ್ಷಿಸಬೇಕು ಮತ್ತು ಇತರ ಸ್ವಯಂವರಗಳು ಇದರಂತೆ ನಡೆಯದೇ ಇರುವಹಾಗೆ ನೋಡಿಕೊಳ್ಳಬೇಕು.”

01180011a ಇತ್ಯುಕ್ತ್ವಾ ರಾಜಶಾರ್ದೂಲಾ ಹೃಷ್ಟಾಃ ಪರಿಘಬಾಹವಃ|

01180011c ದ್ರುಪದಂ ಸಂಜಿಘೃಕ್ಷಂತಃ ಸಾಯುಧಾಃ ಸಮುಪಾದ್ರವನ್||

ಈ ಪ್ರಕಾರ ಮಾತನಾಡಿಕೊಳ್ಳುತ್ತಾ ರಾಜಶಾರ್ದೂಲರೆಲ್ಲರೂ ಉದ್ವೇಗಗೊಂಡು ಆಯುಧಗಳೆನ್ನಿತ್ತಿಕೊಂಡು ದೃಪದನನ್ನು ಮುಗಿಸಿ ಬಿಡುವ ಉದ್ದೇಶದಿಂದ ಆಯುಧಗಳನ್ನು ಬೀಸುತ್ತಾ ಮುನ್ನುಗ್ಗಿದರು.

01180012a ತಾನ್ಗೃಹೀತಶರಾವಾಪಾನ್ಕ್ರುದ್ಧಾನಾಪತತೋ ನೃಪಾನ್|

01180012c ದ್ರುಪದೋ ವೀಕ್ಷ್ಯ ಸಂತ್ರಾಸಾದ್ಬ್ರಾಹ್ಮಣಾಂಶರಣಂ ಗತಃ||

ತಮ್ಮ ತಮ್ಮ ಬಿಲ್ಲು ಬಾಣಗಳನ್ನು ಹಿಡಿದು ಕೋಪದಿಂದ ಮೇಲೆ ಬೀಳುತ್ತಿರುವ ನೃಪರನ್ನು ಕಂಡ ದ್ರುಪದನು ಭಯಗೊಂಡು ಬ್ರಾಹ್ಮಣರ ಶರಣುಹೊಕ್ಕನು.

01180013a ವೇಗೇನಾಪತತಸ್ತಾಂಸ್ತು ಪ್ರಭಿನ್ನಾನಿವ ವಾರಣಾನ್|

01180013c ಪಾಂಡುಪುತ್ರೌ ಮಹಾವೀರ್ಯೌ ಪ್ರತೀಯತುರರಿಂದಮೌ||

ಆಗ ಆ ಅರಿಂದಮ ವೀರ ಪಾಂಡುಪುತ್ರರು ಮದಿಸಿದ ಆನೆಗಳಂತೆ ಶೀಘ್ರವಾಗಿ ರಾಜರನ್ನು ಎದುರಿಸಿ ಮುಂದೆಬಂದರು.

01180014a ತತಃ ಸಮುತ್ಪೇತುರುದಾಯುಧಾಸ್ತೇ

        ಮಹೀಕ್ಷಿತೋ ಬದ್ಧತಲಾಂಗುಲಿತ್ರಾಃ|

01180014c ಜಿಘಾಂಸಮಾನಾಃ ಕುರುರಾಜಪುತ್ರಾವ್

        ಅಮರ್ಷಯಂತೋಽರ್ಜುನಭೀಮಸೇನೌ||

ತಮ್ಮ ಆಯುಧಗಳನ್ನು ಮೇಲೆತ್ತಿ ಅಂಗುಲೀ ಬದ್ಧರಾದ ಮಹೀಕ್ಷಿತರು ಕುರುರಾಜಪುತ್ರರನ್ನು ಕೊಲ್ಲಲು ಅರ್ಜುನ-ಭೀಮಸೇನರ ಮೇಲೆ ಎರಗಿದರು.

01180015a ತತಸ್ತು ಭೀಮೋಽದ್ಭುತವೀರ್ಯಕರ್ಮಾ

        ಮಹಾಬಲೋ ವಜ್ರಸಮಾನವೀರ್ಯಃ|

01180015c ಉತ್ಪಾಟ್ಯ ದೋರ್ಭ್ಯಾಂ ದ್ರುಮಮೇಕವೀರೋ

        ನಿಷ್ಪತ್ರಯಾಮಾಸ ಯಥಾ ಗಜೇಂದ್ರಃ||

ಅದ್ಭುತ ವೀರ್ಯಕರ್ಮಿ, ಮಹಾಬಲಿ, ವಜ್ರಸಮಾನ ವೀರ್ಯವಂತ ಭೀಮನು ಏಕವೀರನಾಗಿ ಒಂದು ವೃಕ್ಷವನ್ನು ಕಿತ್ತು ಕೈಯಲ್ಲಿ ಹಿಡಿದು ಗಜೇಂದ್ರನಂತೆ ಅದರಲ್ಲಿರುವ ಎಲೆಗಳನ್ನೆಲ್ಲ ಉದುರಿಸಿದನು.

01180016a ತಂ ವೃಕ್ಷಮಾದಾಯ ರಿಪುಪ್ರಮಾಥೀ

        ದಂಡೀವ ದಂಡಂ ಪಿತೃರಾಜ ಉಗ್ರಂ|

01180016c ತಸ್ಥೌ ಸಮೀಪೇ ಪುರುಷರ್ಷಭಸ್ಯ

        ಪಾರ್ಥಸ್ಯ ಪಾರ್ಥಃ ಪೃಥುದೀರ್ಘಬಾಹುಃ||

ರಿಪುಪ್ರಮಥಿ ದೀರ್ಘಬಾಹು ಪಾರ್ಥನು ಪಿತೃರಾಜನು ತನ್ನ ಉಗ್ರ ದಂಡವನ್ನು ಹಿಡಿಯುವಂತೆ ಆ ಮರವನ್ನು ಹಿಡಿದು ಪುರುಷರ್ಷಭ ಪಾರ್ಥ ಅರ್ಜುನನ ಪಕ್ಕದಲ್ಲಿ ನಿಂತನು.

01180017a ತತ್ಪ್ರೇಕ್ಷ್ಯ ಕರ್ಮಾತಿಮನುಷ್ಯಬುದ್ಧೇರ್

        ಜಿಷ್ಣೋಃ ಸಹಭ್ರಾತುರಚಿಂತ್ಯಕರ್ಮಾ|

01180017c ದಾಮೋದರೋ ಭ್ರಾತರಮುಗ್ರವೀರ್ಯಂ

        ಹಲಾಯುಧಂ ವಾಕ್ಯಮಿದಂ ಬಭಾಷೇ||

ಅಚಿಂತ್ಯಕರ್ಮಿ ಜಿಷ್ಣು ಮತ್ತು ಅವನ ಸಹೋದರರ ಮನುಷ್ಯರಿಗೆ ಮೀರಿದ ಕೃತ್ಯವನ್ನು ಕಂಡ ದಾಮೋದರನು ತನ್ನ ಅಣ್ಣ ಉಗ್ರವೀರ್ಯ ಹಲಾಯುಧನಿಗೆ ಹೇಳಿದನು:

01180018a ಯ ಏಷ ಮತ್ತರ್ಷಭತುಲ್ಯಗಾಮೀ

        ಮಹದ್ಧನುಃ ಕರ್ಷತಿ ತಾಲಮಾತ್ರಂ|

01180018c ಏಷೋಽರ್ಜುನೋ ನಾತ್ರ ವಿಚಾರ್ಯಮಸ್ತಿ

        ಯದ್ಯಸ್ಮಿ ಸಂಕರ್ಷಣ ವಾಸುದೇವಃ||

“ಸಂಕರ್ಷಣ! ನಾನು ವಾಸುದೇವನೆನ್ನುವುದರಲ್ಲಿ ಹೇಗೆ ಸಂದೇಹವೇ ಇಲ್ಲವೋ ಹಾಗೆ ಮದಿಸಿದ ವೃಷಭನಂತಿರುವ ಮಹಾಧನಸ್ಸನ್ನು ಬಗ್ಗಿಸಿದ ಅವನು ಅರ್ಜುನನೆನ್ನುವುದರಲ್ಲಿ ಸಂದೇಹವೇ ಇಲ್ಲ.

01180019a ಯ ಏಷ ವೃಕ್ಷಂ ತರಸಾವರುಜ್ಯ

        ರಾಜ್ಞಾಂ ವಿಕಾರೇ ಸಹಸಾ ನಿವೃತ್ತಃ|

01180019c ವೃಕೋದರೋ ನಾನ್ಯ ಇಹೈತದದ್ಯ

        ಕರ್ತುಂ ಸಮರ್ಥೋ ಭುವಿ ಮರ್ತ್ಯಧರ್ಮಾ||

ತನ್ನ ಬಲದಿಂದ ವೃಕ್ಷವನ್ನು ಕಿತ್ತು ಈಗ ರಾಜರುಗಳನ್ನು ಎದುರಿಸುತ್ತಿರುವವನು ವೃಕೋದರ. ಯಾಕೆಂದರೆ ಇಂಥಹ ಕೃತ್ಯವನ್ನು ಮಾಡುವ ಬೇರೆ ಯಾವ ಮರ್ತ್ಯನೂ ಈ ಭೂಮಿಯಲ್ಲಿಲ್ಲ.

01180020a ಯೋಽಸೌ ಪುರಸ್ತಾತ್ಕಮಲಾಯತಾಕ್ಷಸ್

        ತನುರ್ಮಹಾಸಿಂಹಗತಿರ್ವಿನೀತಃ|

01180020c ಗೌರಃ ಪ್ರಲಂಬೋಜ್ಜ್ವಲಚಾರುಘೋಣೋ

        ವಿನಿಃಸೃತಃ ಸೋಽಚ್ಯುತ ಧರ್ಮರಾಜಃ|

ಈಗಾಗಲೇ ಹೊರಟುಹೋದ ಕಮಲಪತ್ರಾಕ್ಷ, ತೆಳುದೇಹಿ, ಸಿಂಹನಡುಗೆಯ, ವಿನೀತ, ಗೌರವರ್ಣದ ಹೊಳೆಯುತ್ತಿರುವ ಉದ್ದನೆಯ ಸುಂದರ ಮೂಗಿನ ಮಹಾತ್ಮನು ಧರ್ಮರಾಜನೇ ಇದ್ದಿರಬೇಕು.

01180021a ಯೌ ತೌ ಕುಮಾರಾವಿವ ಕಾರ್ತ್ತಿಕೇಯೌ

        ದ್ವಾವಶ್ವಿನೇಯಾವಿತಿ ಮೇ ಪ್ರತರ್ಕಃ|

01180021c ಮುಕ್ತಾ ಹಿ ತಸ್ಮಾಜ್ಜತುವೇಶ್ಮದಾಹಾನ್

        ಮಯಾ ಶ್ರುತಾಃ ಪಾಂಡುಸುತಾಃ ಪೃಥಾ ಚ||

ಕಾರ್ತಿಕೇಯರಂತೆ ತೋರುತ್ತಿದ್ದ ಆ ಇಬ್ಬರು ಕುಮಾರರು ಅಶ್ವಿನೀ ದೇವತೆಗಳ ಪುತ್ರರಿರಬೇಕೆಂದೇ ನನ್ನ ಅಭಿಪ್ರಾಯ. ಯಾಕೆಂದರೆ ಪಾಂಡುಪುತ್ರರು ಮತ್ತು ಕುಂತಿಯು ಜತುಗೃಹದ ಬೆಂಕಿಯಿಂದ ತಪ್ಪಿಸಿಕೊಂಡರು ಎಂದು ಕೇಳಿದ್ದೇನೆ.”

01180022a ತಮಬ್ರವೀನ್ನಿರ್ಮಲತೋಯದಾಭೋ

        ಹಲಾಯುಧೋಽನಂತರಜಂ ಪ್ರತೀತಃ|

01180022c ಪ್ರೀತೋಽಸ್ಮಿ ದಿಷ್ಟ್ಯಾ ಹಿ ಪಿತೃಷ್ವಸಾ ನಃ

        ಪೃಥಾ ವಿಮುಕ್ತಾ ಸಹ ಕೌರವಾಗ್ರ್ಯೈಃ||

ನಿರ್ಮಲ ಹಲಾಯುಧನು “ನಮ್ಮ ತಂದೆಯ ಸಹೋದರಿ ಪೃಥಾಳಿಗೆ ಕೌರವಾಗ್ರರ ಸಹಿತ ಬಿಡುಗಡೆ ದೊರಕಿದುದನ್ನು ಕೇಳಿ ನನಗೆ ಬಹಳ ಸಂತೋಷವಾಗಿದೆ” ಎಂದು ತನ್ನ ಸಹೋದರನಿಗೆ ಹೇಳಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಕೃಷ್ಣವಾಕ್ಯೇ ಅಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾಎಂಭತ್ತನೆಯ ಅಧ್ಯಾಯವು.

Image result for indian birds images

Comments are closed.